Friday, 15 February 2013

ಯುವಶಕ್ತಿಗೆ ಸರಳ ಸೂತ್ರ


ಫಲಿತಾಂಶಕ್ಕೆ ಅಭಿಮುಖರಾದ ಇಂದಿನ ಯುವಜನರಿಗೆ ಸ್ವಾಮೀಜಿಯ ಬಳಿ ಒಂದು ಸರಳವಾದ ಸೂತ್ರ ಇದೆ. ಈ ನಿಟ್ಟಿನಲ್ಲಿ, ನಾವು ಮಾಡಬಹುದಾದ ಮೂರು ಬಗೆಯ ಸೇವೆಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಮೊದಲನೆಯದು ದೈಹಿಕವಾದ ಸೇವೆ. ಅಂದರೆ ಅಶಕ್ತರ ದೇಹಾರೋಗ್ಯದ ಸಂರಕ್ಷಣೆ ಮತ್ತು ದೈಹಿಕ ನರಳಾಟದ ಸುಧಾರಣೆಗೆ ಅಗತ್ಯವಾದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ಅದಕ್ಕಾಗಿ ಆಸ್ಪತ್ರೆಗಳು, ಅನಾಥಾಲಯಗಳು, ವೃದ್ಧಾಶ್ರಮಗಳನ್ನು ನಡೆಸುವುದು, ಆದಾಯ ತಂದುಕೊಡುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು. ಮುಂದಿನ ಉನ್ನತ ಹಂತ ಬೌದ್ಧಿಕ ಸೇವೆ. ಶಾಲಾ ಕಾಲೇಜುಗಳನ್ನು ನಡೆಸುವುದು, ಜಾಗೃತಿ ಮತ್ತು ಸಬಲೀಕರಣ ಕಾರ್ಯಕ್ರಮಗಳನ್ನು ಈ ಹಂತ ಒಳಗೊಂಡಿದೆ.
ಅಂತಿಮವಾದ ಮತ್ತೊಂದು ಹಂತವೆಂದರೆ ಅತ್ಯಂತ ಉನ್ನತ ಮಟ್ಟವಾದ ಆಧ್ಮಾತ್ಮಿಕ ಸೇವೆ. ಈ ಬಗೆಯ ಸೇವಾ ಕೈಂಕರ್ಯಗಳನ್ನು ಕೈಗೊಳ್ಳುವಾಗ ಎದುರಾಗುವ ಅಪಾಯಗಳ ಬಗ್ಗೆ ನಮ್ಮನ್ನು ಎಚ್ಚರಿಸಲು ಸಹ ಸ್ವಾಮೀಜಿ ಮರೆತಿಲ್ಲ. ಮಾನವನ ಅಹಂ ಮತ್ತು ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ಅದರ ಅಸಾಧಾರಣ ಸಾಮರ್ಥ್ಯವನ್ನು ಅವರು ಚೆನ್ನಾಗಿಯೇ ಗ್ರಹಿಸಿದ್ದರು. ನಾವು ಹೇಗಿರಬೇಕೋ ಅದಕ್ಕಿಂತ ಉನ್ನತ ಮಟ್ಟದಲ್ಲಿ ನಮ್ಮನ್ನು ನಾವು ಕೂರಿಸಿಕೊಳ್ಳುವ ಬಗ್ಗೆಯೂ ಪದೇ ಪದೇ ಅವರು ಎಚ್ಚರಿಕೆ ನೀಡಿದ್ದಾರೆ.
`ಪೀಠದ ಮೇಲೆ ನಿಂತು ಬಡವನತ್ತ ಒಂದಿಷ್ಟು ಹಣ ಒಗೆಯುವುದು ಸರಿಯಲ್ಲ' ಎಂಬ ಅವರ ಉಕ್ತಿಯಂತೂ ದಂತಕತೆಯೇ ಆಗಿದೆ. ಸೇವಾ ಕಾರ್ಯ ಕೈಗೆತ್ತಿಕೊಳ್ಳುವುದು ಕೇವಲ ಸಮಾಜದ ಉದ್ಧಾರಕ್ಕಷ್ಟೇ ಅಲ್ಲ, ಅಂತಹ ಕಾರ್ಯ ನಡೆಸುವವರ ವಿಕಸನ ಮತ್ತು ಬೆಳವಣಿಗೆಯ ಸಲುವಾಗಿಯೂ ಅದು ಅಗತ್ಯ, ಸಮಾಜ ಸೇವೆಯ ಈ ಮಾರ್ಗವು ಆಧ್ಮಾತ್ಮಿಕ ವಿಕಸನದ ಅಂತಿಮ ಹಂತವೂ ಹೌದು ಎಂದು ಅವರು ತಿಳಿದಿದ್ದರು. `ಜನಸೇವೆಯೇ ಜನಾರ್ದನನ ಸೇವೆ' ಎಂಬ ಸ್ವಾಮೀಜಿಯ ಅದ್ಭುತವಾದ ಸಲಹೆಯಲ್ಲಂತೂ, ಅವರ ಎಲ್ಲ ಬಗೆಯ ಅತ್ಯುನ್ನತ ತತ್ವಚಿಂತನೆಯೂ ಅತ್ಯಂತ ಸರಳವಾಗಿ ಮಿಳಿತಗೊಂಡಿದೆ. ಈ ಹೇಳಿಕೆ ಒಂದು ಭಾವನಾತ್ಮಕವಾದ ನಿವೇದನೆಯಂತಿದ್ದು, ಸೇವಾ ಕಾರ್ಯವನ್ನು ಕೈಗೆತ್ತಿಕೊಳ್ಳಲು ಪ್ರೇರೇಪಣೆ ನೀಡುತ್ತದೆ.
ಸ್ವಾಮಿ ವಿವೇಕಾನಂದರು ಮತ್ತು ಅವರ ಸಂದೇಶಗಳನ್ನು ನಮ್ಮ ಯುವಜನರಲ್ಲಿ ಅಂತರ್ಗತ ಮಾಡಿಸುವುದು ಇಂದು ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮುಖಾಮುಖಿಯಾಗಲು ಇರುವ ಅತ್ಯಂತ ಸರಳವಾದ ಮಾರ್ಗ. ಪ್ರತಿ ಯುವಶಕ್ತಿಯೂ ತನ್ನೊಳಗಿನಿಂದಲೇ ಕಾರ್ಯಾರಂಭ ಮಾಡಬೇಕು. ಅಂತಹ ಕಾರ್ಯಕ್ಕಾಗಿ ತಮ್ಮ ವ್ಯಕ್ತಿತ್ವವನ್ನು ಸಿದ್ಧಗೊಳಿಸಿಕೊಳ್ಳಬೇಕು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ನಾವು ಆ ಕಾರ್ಯಕ್ಕೆ ಬದ್ಧರಾಗಿದ್ದೇವೆ ಎಂಬ ಭರವಸೆ ಮೂಡಿಸುವಂತೆ ಇರಬೇಕು. ಯುವಜನರಿಗೆ ಸಮಾಜ ಸೇವೆಗಿಂತ ಉತ್ತಮವಾದ ಮಾರ್ಗದರ್ಶನ ಬೇರೆ ಯಾವುದಿದೆ?
ಆದರೆ ಸಮಾಜ ಸೇವೆಯು, ಲೌಕಿಕ ಹೊಣೆಗಾರಿಕೆಯನ್ನೆಲ್ಲ ತ್ಯಜಿಸಿ ಯಾವುದೋ ಕುಗ್ರಾಮದಲ್ಲಿ ಉಪವಾಸ ಕುಳಿತ ಮಾತ್ರಕ್ಕೆ ತಾನೇ ತಾನಾಗಿ ಆಗಿಬಿಡುವ ಕ್ರಿಯೆಯಲ್ಲ.  ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಅದನ್ನು ಪ್ರಾಯೋಗಿಕವಾದ ಕ್ರಿಯೆಯಲ್ಲಿ ತೊಡಗಿಸುವ ಮೂಲಕ ಈ ಕಾರ್ಯ ಆರಂಭವಾಗುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರು ಇತರರ ಅಗತ್ಯಗಳು ಮತ್ತು ಮಿತಿಗಳನ್ನು ಗಮನದಲ್ಲಿ ಇರಿಸಿಕೊಂಡಿರಬೇಕಾಗುತ್ತದೆ. ಹೀಗೆ ನಮ್ಮಳಗಿನಿಂದಲೇ ಆರಂಭವಾಗುವ ಈ ಕಾರ್ಯ ಕ್ರಮೇಣ ಅರ್ಹ ವ್ಯಕ್ತಿಗಳನ್ನೂ ಒಳಗೊಳ್ಳುತ್ತದೆ. ಇದು ನಮ್ಮ ಸಾಮಾಜಿಕ ಕಾರ್ಯಗಳ ಯಶಸ್ಸು ಮತ್ತು ಪ್ರಾಯೋಗಿಕತೆಗಾಗಿ ಯುವಜನರಿಗೆ ಸ್ವಾಮೀಜಿ ವಿವರಿಸಿರುವ ಒಂದು ಮಾರ್ಗ.
ಪ್ರತಿಯೊಬ್ಬರೂ ತಾವು ಏನಾಗಿರುವರೋ (ತಂತ್ರಜ್ಞಾನಿ, ವಿಜ್ಞಾನಿ, ಎಂಜಿನಿಯರ್, ವೈದ್ಯ ಇತ್ಯಾದಿ) ಆ ಕಾರ್ಯದಲ್ಲಿ ಇದ್ದುಕೊಂಡೇ ಸೇವಾ ಕಾರ್ಯದಲ್ಲಿ ತೊಡಗಬಹುದು. ನಮ್ಮ ಬದುಕಿನ ಪುಟ್ಟ ವೃತ್ತದಲ್ಲೇ ಏನನ್ನು ಬೇಕಾದರೂ ಸಾಧಿಸಲು ಸಾಕಷ್ಟು ಅವಕಾಶಗಳಿವೆ. ಸಣ್ಣ ಸಣ್ಣ ಬದಲಾವಣೆಗಳು ದೊಡ್ಡ ಕಾರ್ಯಕ್ಕೆ ಮುನ್ನುಡಿ ಬರೆಯುತ್ತವೆ. ಒಬ್ಬ ಒಳ್ಳೆಯ ಮತ್ತು ಪ್ರಾಮಾಣಿಕ ತಂತ್ರಜ್ಞಾನಿ, ವಿಜ್ಞಾನಿ, ಎಂಜಿನಿಯರ್ ಅಥವಾ ವೈದ್ಯ ಆಗಿರುವುದೇ ಉತ್ತಮ ಕಾರ್ಯದ ಆರಂಭ.
ಇಚ್ಛಾಶಕ್ತಿ ಹೊಂದಿದ, ಸಮರ್ಥರಾದ, ಲೌಕಿಕ ಜಂಜಾಟಗಳಿಂದ ಮುಕ್ತರಾದ, ಕೌಟುಂಬಿಕ ಬೇಡಿಕೆಗಳಿಗೆ ಸೀಮಿತವಾಗದ ಅದೃಷ್ಟಶಾಲಿಗಳು ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು ಮತ್ತು ಸಮಾಜ ಸೇವೆಯನ್ನು ಪೂರ್ಣಕಾಲಿಕವಾಗಿ ಮುನ್ನಡೆಸಲು ಮುಂದಾಗಬಹುದು.  ವೃತ್ತಿ ಬದುಕಿಗೆ ಸೀಮಿತ ಆಗದೆ ನಮ್ಮ ನಮ್ಮ ಪರಿಮಿತಿಗಳಲ್ಲೇ ಸಾಮಾಜಿಕ ಕ್ಷೇತ್ರಕ್ಕೂ ನಮ್ಮ ಕಾರ್ಯವನ್ನು ವಿಸ್ತರಿಸಿಕೊಳ್ಳುವ ಮೂಲಕ, ಸಾವಿರಾರು ಅರ್ಹ ಮತ್ತು ಆಸಕ್ತ ಯುವಜನರ ಗುಣಮಟ್ಟದ ಸಮಯವನ್ನು ಘನವಾದ ಕಾರ್ಯಗಳಲ್ಲಿ ತೊಡಗಿಸಬಹುದು. ಹೀಗೆ, ಸಾಮಾಜಿಕ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮ ಸುತ್ತಮುತ್ತಲಿನವರ ಸಮಸ್ಯೆಗಳಿಗೆ ಮಾತ್ರವಲ್ಲ, ನಮ್ಮಳಗಿನ ಸಮಸ್ಯೆಗಳು ಮತ್ತು ಗೊಂದಲಗಳಿಗೂ ನಾವು ಉತ್ತರ ಕಂಡುಕೊಳ್ಳಬಹುದು ಎಂಬ ಸತ್ಯ ಅಂತಿಮವಾಗಿ ನಮಗೆ ಗೋಚರಿಸುತ್ತದೆ.
ಕೃಪೆ: ಪ್ರಜಾವಾಣಿ

No comments:

Post a Comment