Friday, 8 February 2013

ಸರಳ ಸುಭಗ ಶೈಲಿ


ಶ್ರೀ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಅನೇಕ ಲೇಖನ, ಭಾಷಣ ಸಂದರ್ಶನಗಳನ್ನು ಕ್ರೋಡೀಕರಿಸಿ 'ಹೊಸ ವಿಚಾರಗಳು' ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಕೃತಿಯನ್ನು ಪ್ರಕಟಿಸಬೇಕೆಂದು ಆಶಿಸಿದ್ದರು. ಈಗ ತೇಜಸ್ವಿಯವರ ಅನುಪಸ್ಥಿತಿಯಲ್ಲಿ ಅವರ ಆಶಯದಂತೆ 'ಹೊಸ ವಿಚಾರಗಳು' ಎಂಬ ಕೃತಿಯನ್ನು ಓದುಗರ ಮುಂದಿಡುತ್ತಿದ್ದೇವೆ. ಇಲ್ಲಿರುವ ಲೇಖನಗಳನ್ನು ನೋಡಿ ಇವೆಲ್ಲವೂ ಈಗಾಗಲೇ ನಡೆದು ಹೋಗಿರುವ ಸಂಗತಿಗಳು ಎಂದು ಪ್ರಥಮ ನೋಟಕ್ಕೆ ನಿಮಗೆ ಅನ್ನಿಸಬಹುದು. ನಿಧಾನವಾಗಿ ಕಣ್ಣಾಡಿಸಿ, ಹಲವು ಘಟನೆಗಳು ಆಗಿ ಹೋಗಿದ್ದರೂ ಅವುಗಳ ಫಲಶ್ರುತಿಯನ್ನು ಈಗಲೂ ಅನುಭವಿಸುತ್ತಿರುತ್ತೇವೆ. ಇನ್ನು ಕೆಲವು ವಿಷಯಗಳು ಅಗ್ನಿಪರ್ವತಗಳಂತೆ ಸುಪ್ತವಾಗಿದ್ದು ಆಗೀಗ ಕೆಣಕಿದಾಗ ಭುಗಿಲೆಂದು ಮೇಲೇಳುತ್ತವೆ. ಇನ್ನು ಕೆಲವು ಸಮಸ್ಯೆಗಳು ಮಗ್ಗುಲ ಮುಳ್ಳಾಗಿ ನಿರಂತರ ಕಿರಿಕಿರಿ ಉಂಟು ಮಾಡುತ್ತಲೇ ಇರುತ್ತವೆ. ಇಂತಹ ಅನೇಕ ಜ್ವಲಂತ ಸಮಸ್ಯೆಗಳನ್ನು ತೇಜಸ್ವಿಯವರು ಅಪೂರ್ವ ಒಳನೋಟ ಸೂಕ್ಷ್ಮತೆಗಳಿಂದ ವಿಶ್ಲೇಷಿಸಿರುವುದನ್ನು ಕಾಣುತ್ತೇವೆ. ಆಗ ಅವು ದಿನನಿತ್ಯದ ಸಮಸ್ಯೆಗಳಾಗೇ ಕಾಣತೊಡಗುತ್ತವೆ. ಹೀಗೆ ಈ ಸಂಗ್ರಹದಲ್ಲಿ ಚರ್ಚಿತವಾಗಿರುವ ವಿಷಯಗಳು ತೇಜಸ್ವಿಯವರಿಗಿದ್ದ ಅಪಾರ ಜ್ಞಾನಸಂಪತ್ತು, ಯಾವುದನ್ನೇ ಆಗಲಿ ವಿನೂತನವಾಗಿ ವಿಶ್ಲೇಷಿಸುತ್ತಿದ್ದ ರೀತಿ, ಒಬ್ಬ ಲೇಖಕನಾಗಿ ಅವರಿಗಿದ್ದ ಸಾಮಾಜಿಕ ಜವಾಬ್ದಾರಿಯನ್ನು ಈ ಕೃತಿಯ ಲೇಖನಗಳು ಓದುಗರ ಮುಂದಿಡುತ್ತವೆ.
ಈ ಕೃತಿಯು ಅಗಣಿತ ವಿಚಾರಗಳ ಭಂಡಾರ. ತೇಜಸ್ವಿಯವರು ತಮ್ಮ ಜೀವಿತಾವದಿsಯಲ್ಲಿ ಚಿಂತಿಸಿ ಬರೆದ, ವೇದಿಕೆಗಳಿಂದ ಮಾತನಾಡಿದ ಹಾಗೂ ಸಕ್ರಿಯವಾಗಿ ಭಾಗವಹಿಸಿದ ಅವರ ಸಮಾಜಮುಖಿ ಮಾತು ಕೃತಿಗಳ ಸಮುಚ್ಚಯ. ಇವನ್ನು ಸುಲಭ ಓದಿಗೆ ಅನುಕೂಲವಾಗುವಂತೆ ಹಲವು ಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಲಾಗಿದೆ. ಯಾವುದೇ ವಿಷಯವನ್ನು ಎಲ್ಲಿಂದ ಆರಿಸಿ ಓದಿದರೂ ಅದೊಂದು ಪರಿಪೂರ್ಣ ಘಟಕವಾಗಿರುತ್ತದೆ. ತೇಜಸ್ವಿಯವರ ಉನ್ನತ ಆಲೋಚನಾ ಮಟ್ಟ ಹಾಗೂ ಅವನ್ನು ತಮ್ಮ ಜನಕ್ಕೆ ಸುಲಭವಾಗಿ ಅರ್ಥವಾಗುವಂತೆ ಹೇಳಿರುವ ಸರಳ ಸುಭಗ ಶೈಲಿ ಈ ಕೃತಿಯನ್ನು ಓದುಗರಿಗೆ ತುಂಬಾ ಆಪ್ತವಾಗಿಸುತ್ತದೆ.
ತೇಜಸ್ವಿಯವರು ತಮ್ಮ ಸುತ್ತಮುತ್ತಲಿನ ಪರಿಸರ ಹಳ್ಳಿ, ದಿಳ್ಳಿ, ರಾಜಕೀಯ ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ ವಿಚಾರಗಳನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವೇಚಿಸಿದ್ದಾರೆ. ಗಹನವಾದ ವಿಷಯವನ್ನು ಸುಲಭವಾಗಿ ಹೇಳುವುದೇ ಅವರ ವೈಶಿಷ್ಟ್ಯವೆಂದು ಹೇಳಿದಾಗ ಗಂಭೀರ ಸಮಸ್ಯೆ, ಚಿಂತನೆಗಳನ್ನು ಸರಳೀಕೃತವಾಗಿಸಿದ್ದಾರೆಂದು ತಿಳಿಯಬಾರದು. 'ಅವರ ಗುರಿ ಗಹನವಾದ ವಿಚಾರಗಳನ್ನು ಸುಲಭವಾಗಿ ತಮ್ಮ ಜನರಿಗೆ ಅರ್ಥ ಮಾಡಿಸುವುದು'. ಈ ನಿಟ್ಟಿನಲ್ಲಿ ತೇಜಸ್ವಿಯವರು ಸಫಲರಾಗಿದ್ದಾರೆ. ಇದಕ್ಕೆ ಪೂರಕವಾಗಿ ಈ ಕೃತಿಯಿಂದಲೇ ಕೆಲವು ಅಂಶಗಳನ್ನು ತೆಗೆದುಕೊಂಡು, ವಿಶದೀಕರಿಸಬಹುದು. "ಯುವ ಬರಹಗಾರರಲ್ಲಿ ನಂಬಿಕೆ ಹುಟ್ಟಿಸಬೇಕು" ಎಂಬ ಲೇಖನದಲ್ಲಿ ಸಾಹಿತ್ಯ ರಚನೆಯ ಬಗ್ಗೆ ತೇಜಸ್ವಿಯವರ ಚಿಂತನೆಯನ್ನು ಅವರ ಮಾತುಗಳಲ್ಲೇ ನೋಡಿ. "ಸಾಹಿತ್ಯ ಮತ್ತು ಲೇಖನಗಳು ದಲಿತರ ಶೂದ್ರರ ಅನಿಸಿಕೆ ಮತ್ತು ಅಭಿವ್ಯಕ್ತಿಗಳಿಗೆ ವಾಹಕವಾಗಬೇಕೆನ್ನುವುದು ನಿಜ. ಆದರೆ ಅದೊಂದು ಲಲಿತ ಕಲೆ,(ಫೈನ್ ಆರ್ಟ್) ಅನ್ನುವುದನ್ನು ಮರೆತೇಬಿಟ್ಟರೆ ಹೇಗೆ? ಭಾಷೆಯ ಉಪಯೋಗದಲ್ಲಿನ ಕಲಾತ್ಮಕತೆಯನ್ನು ತ್ಯಜಿಸಿದರೆ ಅದರಲ್ಲಿ ಹರಿಯುವ ವಿದ್ಯುತ್ ನಿಂತು ಅದೊಂದು ಜಡವಾದ ತಂತಿಯಾಗುತ್ತದೆ. ಓದಿದವರ ಮನಸ್ಸಿನಲ್ಲಿ ಯಾವ ದೀಪವೂ ಹತ್ತಿಕೊಳ್ಳುವುದಿಲ್ಲ. ನಮ್ಮ ಸಾಮಾಜಿಕ ಕಳಕಳಿ ಮತ್ತು ಕಲೆಗಾರಿಕೆ ಇವೆರಡರಲ್ಲಿ ಯಾವುದನ್ನು ತ್ಯಜಿಸಿದರೂ ನಮ್ಮ ಬರವಣಿಗೆ ನಿರ್ಜೀವವಾಗುತ್ತದೆ." ಇದು ಎಲ್ಲ ಲೇಖಕರಿಗೂ ಮಾರ್ಗದರ್ಶಿಯಾಗಬಲ್ಲ ಮಾತುಗಳಾಗಿವೆ.
ತೇಜಸ್ವಿಯವರ ಕಾಳಜಿ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಅವರು ತಮ್ಮ ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಇಟ್ಟುಕೊಂಡಿದ್ದ ಆಳವಾದ ಕಾಳಜಿಯ ದ್ಯೋತಕವಾಗಿ ಅವರು ಕಾಫಿ ಬೆಳೆಗಾರರನ್ನು ಕಾಫಿ ಬೋರ್ಡಿನ ಕಪಿ ಮುಷ್ಟಿಯಿಂದ ಬಿಡಿಸಿ ಕಾಫಿಗೆ ಮುಕ್ತ ಮಾರುಕಟ್ಟೆ ಸಿಗುವಂತೆ ಮಾಡಲು ತಮ್ಮ ಸಹ ಬೆಳೆಗಾರರೊಡನೆ ನಡೆಸಿದ ಹೆರಾಟ ಈಗ ಇತಿಹಾಸ. ಅವರ ಈ ಕಳಕಳಿ ತಮ್ಮ ಪರಿಸರದ ಕಾಫಿ ಬೆಳೆಗೆ ಮಾತ್ರ ಸೀಮಿತವಾಗದೆ ಅನೇಕ ವಿಧದ ಬೆಳೆಬೆಳೆಯುವ ಎಲ್ಲ ರೈತರ ಒಳಿತಿಗಾಗಿ, ರೈತರ ಹೆರಾಟಕ್ಕೆ ಬೆಂಬಲ, ರೈತರಿಗೆ ಸರ್ಕಾರದಿಂದಾಗುವ ಅನ್ಯಾಯ, ತಾರತಮ್ಯ, ಕಾರ್ಖಾನೆಗಳಿಂದ ರೈತರ ಶೋಷಣೆ ಇವೆಲ್ಲಕ್ಕೂ ತೇಜಸ್ವಿ ದನಿ ಎತ್ತಿರುವುದನ್ನು ಅವರ ಅನೇಕ ಬರಹಗಳಲ್ಲಿ ಕಾಣಬಹುದು.
ಒಂದಿಲ್ಲೊಂದು ಸಮಸ್ಯೆಗಳ ಬಲೆಯೊಳಗೆ ಸಿಲುಕಿ ತೊಳಲಾಡುವುದು ಮಾನವನಿಗೆ ಉಸಿರಾಟದಷ್ಟೇ ಸಹಜವೆಂದು ಕಾಣಿಸುತ್ತದೆ. ಅನೇಕ ಸಂಗತಿಗಳು ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿದ್ದು ಒಮ್ಮೆ ಕಿಡಿಕಾರಬಹುದು. ನೆಲಕ್ಕಾಗಿ ಹೆರಾಟ, ನೀರಿಗಾಗಿ ಹೋರಾಟ ಇವೆಲ್ಲ ಇಂದಿಗೂ ತೀರ್ಮಾನ ಕಾಣದ, ಸದಾ ಪಕ್ಕೆಯನ್ನು ತಿವಿಯುವ ಮುಳ್ಳುಗಳಾಗಿವೆ. ಈ ಸಂಕಲನದ "ಕೊಡಗನ್ನು ಗಮನಿಸಿ" ಎಂಬ ಬರಹ ಓದಿದರೆ ಇಂದು ಪ್ರತ್ಯೇಕ ಕೊಡಗು ರಾಜ್ಯದ ಕೂಗು ಏಕೆ ಎದ್ದಿದೆ ಎಂಬುದು ವಿಶದವಾಗುತ್ತದೆ. ಈ ಲೇಖನದಲ್ಲಿ ಮಾನ್ಯ ಗುಂಡೂರಾಯರ ಕಾಲದಲ್ಲಿ ನೆರೆ ರಾಜ್ಯದವರಿಗೆ ದೊರೆತ ಅನೇಕ ಆಹ್ವಾನಗಳಿಂದ ಕೊಡಗಿನ ಕಾಡುಗಳ ಮರಮುಟ್ಟು, ಗಂಧ, ದಂತಗಳ ಲೂಟಿ, ಕಾಡಿನ ನಾಶ, ನೆಲದ ಆಕ್ರಮಣ ಪ್ರಾರಂಭವಾಗಿದ್ದನ್ನೂ ಪರಿಣಾಮವಾಗಿ ಅಲ್ಲಿ ಕಾಫಿ ಚಳವಳಿ,  ಕೊಡಗು ಏಕೀಕರಣ ಚಳವಳಿ, ಕೊಡಗಿನ ಪರಿಸರ ರಕ್ಷಣೆಯ ಚಳವಳಿಗಳು ಪ್ರಾರಂಭವಾಗಿದ್ದನ್ನು ಲೇಖಕರು ವಿವರಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ನಮ್ಮನ್ನು ರಾಜಕೀಯವಾಗಿ ಕಾಡುತ್ತಿರುವ, ಇಂದಿಗೂ ಪರಿಹಾರ ಕಾಣದ ಸಮಸ್ಯೆಯಾಗಿ ಕೊಡಗು ಉಳಿದಿರುವುದನ್ನು ಕಾಣಬಹುದು.
ಇಂದಿನ ಜಾಗತೀಕರಣ, ತಂತ್ರಾಂಶಗಳ ಕಾಲಮಾನದ ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಇಂದು ಯುವ ಜನತೆಗೆ ಆರ್ಥಿಕ ಸ್ವಾತಂತ್ರ್ಯ, ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಮೊದಲಿಗಿಂತ ಹೆಚ್ಚುಪಟ್ಟು ಸಿಕ್ಕಿದೆ. ಇಂದು ಅಂತರ್ಜಾತಿ ವಿವಾಹಗಳಿಗೆ ಆರ್ಥಿಕ ಸ್ವಾತಂತ್ರ್ಯ ಬಹು ಮುಖ್ಯ ಕಾರಣವೆನ್ನುವುದು ಸ್ಪಷ್ಟವಾಗಿದೆ. ಅಂತರ್ಜಾತಿ ವಿವಾಹಿತರ ಜವಾಬ್ದಾರಿ, ಸಂಪ್ರದಾಯಸ್ಥರು ಅಂತರ್ಜಾತಿ ವಿವಾಹಗಳಿಗೆ ಏಕೆ ವಿರೋಧ ಒಡ್ಡುತ್ತಾರೆ ಎನ್ನುವುದರ ಬಗ್ಗೆ ತೇಜಸ್ವಿಯವರು ಹೇಳಿರುವುದನ್ನು ನೋಡಿ. "ಯಾವ ಕ್ರಮದ ವಿವಾಹವೇ ಆಗಲಿ, ಅದರ ಸಫಲತೆ, ವಿಫಲತೆಗಳಿಗೆ ಕಾರಣಗಳನ್ನು ಗಂಡುಹೆಣ್ಣಿನ ವ್ಯಕ್ತಿ ವೈಲಕ್ಷಣಗಳಲ್ಲಿ ಹುಡುಕಬೇಕೇ ಹೆರತು ಅವರ ವಿವಾಹ ಕ್ರಮದಲ್ಲಿ ಹುಡುಕುವುದು ವ್ಯರ್ಥ. ಮದುವೆಯಿಂದ ಅತಿಯಾಗಿ ಅಪೇಕ್ಷಿಸಿದೆ, ತಾಳ್ಮೆ ಸಂಯಮದಿಂದ ಬದುಕುವುದಕ್ಕೆ ಪರ್ಯಾಯ ಯಾವುದೂ ಇಲ್ಲ. ಈ ಕನಿಷ್ಠ ಶಿಸ್ತು ಇಲ್ಲದಿದ್ದಲ್ಲಿ ಅಂತರ್ಜಾತೀಯ ವಿವಾಹವಾದರೂ ಕಲಹ ವೈಮನಸ್ಯಗಳು ತಪ್ಪಿದ್ದಲ್ಲ, ಸಂಪ್ರದಾಯ ಬದ್ಧವಾಗಿ ಆದರೂ ತಪ್ಪಿದ್ದಲ್ಲ."
ತೇಜಸ್ವಿಯವರು ತಮಗೆ 'ಪಂಪ ಪ್ರಶಸ್ತಿ' ಬಂದಾಗ ಸಂದರ್ಶವೊಂದರಲ್ಲಿ ಹೇಳಿದ ಮಾತುಗಳು ಹೀಗಿವೆ. "ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನು ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಷನ್‌ಗೇ ಇರೋದು. ಬರೆದು ಗೆಲ್ಲ ಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು."
ಮೇಲಿನ ಮಾತುಗಳನ್ನು ನೆನೆಯುತ್ತಾ ತೇಜಸ್ವಿಯವರ 'ಹೊಸ ವಿಚಾರಗಳು' ಎಂಬ ಈ ಕೃತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಓದುಗುರ ಮೆಚ್ಚುಗೆ, ಪ್ರೋತ್ಸಾಹವೇ ನಮ್ಮ ಪ್ರಕಾಶನಕ್ಕೆ ದೊಡ್ಡ ಪ್ರಶಸ್ತಿಯೆಂದು ನಂಬಿದ್ದೇವೆ.ಇನ್ನೂ ಕೆಲವು ಲೇಖನಗಳು ನಮಗೆ ದೊರೆಯದೆ ಇದ್ದಿರಬಹುದು. ಓದುಗರಿಗೆ ದೊರೆತು ಕಳಿಸಿದರೆ ಸಾಹಿತ್ಯಾಸಕ್ತ ಅಭಿಮಾನಿಗಳಿಗೆ ತುಂಬಾ ಉಪಕಾರವಾದೀತು.

No comments:

Post a Comment